ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒತ್ತಡದಿಂದ ಹೊರಗೆ ಬನ್ನಿ

ಒತ್ತಡದಿಂದ ಹೊರ ಬರುವ ದಾರಿ

ಒತ್ತಡದಿಂದ ಹೊರ ಬರುವ ದಾರಿ

ಆರೋಗ್ಯ, ಬೇರೆಯವರೊಟ್ಟಿಗೆ ನಮ್ಮ ಸಂಬಂಧ, ಗುರಿಗಳು ಇವೆಲ್ಲಾ ಜೀವನದಲ್ಲಿ ಮುಖ್ಯವಾದ ವಿಷಯಗಳು. ಇಂಥ ವಿಷಯಗಳಿಗೆ ಗಮನ ಕೊಟ್ಟರೆ ಚಿಕ್ಕ ಚಿಕ್ಕ ವಿಷಯಗಳು ದೊಡ್ಡ ಸಮಸ್ಯೆ ತರ ಕಾಣಲ್ಲ. ಆಗ ಒತ್ತಡನಾ ಜಯಿಸೋಕೆ ಆಗುತ್ತೆ. ಇದನ್ನು ಮಾಡೋಕೆ ಸಹಾಯ ಮಾಡುವ ಕೆಲವು ಸಲಹೆಗಳನ್ನು ನಾವೀಗ ನೋಡೋಣ.

ನಾಳೆ ಬಗ್ಗೆ ಚಿಂತಿಸಬೇಡಿ

“ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು.”—ಮತ್ತಾಯ 6:34.

ಅರ್ಥ: ಜೀವನದಲ್ಲಿ ಚಿಂತೆಗಳು ಇದ್ದದ್ದೇ. ಆದರೆ ಇವತ್ತಿನ ಚಿಂತೆ ಜೊತೆ ನಾಳಿನ ಬಗ್ಗೇನೂ ಯೋಚಿಸಿದ್ರೆ ಚಿಂತೆ ಇನ್ನೂ ಜಾಸ್ತಿ ಆಗುತ್ತೆ. ಆಯಾ ದಿನದ ಚಿಂತೆ ಆ ದಿನಕ್ಕೇ ಸಾಕು.

  • ಒತ್ತಡದಿಂದ ಆತಂಕ ಜಾಸ್ತಿ ಆಗುತ್ತೆ. ಹಾಗಾಗಿ ಹೀಗೆ ಮಾಡಿ: ಮೊದಲನೇದಾಗಿ, ಕೆಲವೊಮ್ಮೆ ಒತ್ತಡ ಅನಿವಾರ್ಯ ಅನ್ನೋದನ್ನು ಅರ್ಥಮಾಡಿಕೊಳ್ಳಿ. ಯಾಕಂದ್ರೆ ನಮ್ಮ ಕೈಯಲ್ಲಿ ತಡೆಯಲು ಆಗದ ವಿಷಯಗಳ ಬಗ್ಗೆ ಯೋಚಿಸುತ್ತಾ ಕೂತ್ರೆ ಒತ್ತಡ ಜಾಸ್ತಿ ಆಗುತ್ತೆ. ಎರಡನೇದಾಗಿ, ಎಲ್ಲಾ ಸಮಯದಲ್ಲೂ ನಾವು ಅಂದುಕೊಂಡಷ್ಟು ಕೆಟ್ಟದಾಗಿ ವಿಷಯಗಳು ನಡಿಲಿಕ್ಕಿಲ್ಲ ಅನ್ನೋದನ್ನು ಅರ್ಥಮಾಡಿಕೊಳ್ಳಿ.

ಅತಿಯಾಗಿ ನಿರೀಕ್ಷಿಸಬೇಡಿ

“ಮೇಲಣಿಂದ ಬರುವ ವಿವೇಕವು . . . ನ್ಯಾಯಸಮ್ಮತವಾದದ್ದು”—ಯಾಕೋಬ 3:17.

ಅರ್ಥ: ಎಲ್ಲಾ ಪರ್ಫೆಕ್ಟಾಗಿ ಇರಬೇಕು ಅಂತ ನೆನೆಸಬೇಡಿ. ನಿಮ್ಮಿಂದ ಆಗದ ಬೇರೆಯವರಿಂದ ಆಗದ ವಿಷಯಗಳನ್ನು ಮಾಡಲೇಬೇಕು ಅಂತ ಪಟ್ಟು ಹಿಡೀಬೇಡಿ.

  • ನಿಮ್ಮ ಇತಿಮಿತಿಗಳ ಜೊತೆ ಬೇರೆಯವರ ಇತಿಮಿತಿಗಳನ್ನೂ ಅರ್ಥಮಾಡಿಕೊಳ್ಳಿ. ಅತಿಯಾಗಿ ನಿರೀಕ್ಷಿಸಬೇಡಿ. ಹೀಗೆ ಮಾಡಿದ್ರೆ ನಿಮ್ಮ ಒತ್ತಡದ ಜೊತೆ ಬೇರೆಯವರಿಗೆ ಇರೋ ಒತ್ತಡನೂ ಕಮ್ಮಿ ಆಗುತ್ತೆ, ಕೆಲಸನೂ ಚೆನ್ನಾಗಿ ಆಗುತ್ತೆ. ಆಗಾಗ ಜೋಕ್‌ ಮಾಡುತ್ತಾ, ನಗುತ್ತಾ ಇರಿ. ಹೀಗೆ ನಗುತ್ತಾ ಇದ್ದರೆ ಸಮಸ್ಯೆಗಳು ಇದ್ದರೂ ಜಾಸ್ತಿ ಟೆನ್‌ಷನ್‌ ಆಗಲ್ಲ. ನಿಮ್ಮ ಮೂಡ್‌ ಸಹ ಚೆನ್ನಾಗಿರುತ್ತೆ.

ಒತ್ತಡಕ್ಕೆ ಕಾರಣ ಏನು ಅಂತ ತಿಳುಕೊಳ್ಳಿ

‘ಶಾಂತ ಗುಣವುಳ್ಳವನು ವಿವೇಕಿ.’—ಜ್ಞಾನೋಕ್ತಿ 17:27.

ಅರ್ಥ: ಕೋಪ, ಆತಂಕ ಇದ್ದಾಗ ಸರಿಯಾಗಿ ಯೋಚಿಸೋಕೆ ಆಗಲ್ಲ. ಹಾಗಾಗಿ ಶಾಂತರಾಗಿರಲು ಪ್ರಯತ್ನಿಸಿ.

  • ನಿಮಗೆ ಯಾವ ವಿಷಯದಿಂದ ಒತ್ತಡ ಬರುತ್ತೆ, ಆಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ ಅಂತ ತಿಳುಕೊಳ್ಳಿ. ಉದಾಹರಣೆಗೆ, ಒತ್ತಡ ಬಂದಾಗ ನಿಮ್ಮ ಯೋಚನೆ, ಭಾವನೆ, ನಡವಳಿಕೆ ಹೇಗಿರುತ್ತೆ ಅಂತ ಬರೆದಿಟ್ಟುಕೊಳ್ಳಿ. ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ ಅಂತ ಗೊತ್ತಾದರೆ ಒತ್ತಡನಾ ನಿಭಾಯಿಸಲು ಸಹಾಯ ಆಗುತ್ತೆ. ನಿಮ್ಮ ಜೀವನದಲ್ಲಿ ಒತ್ತಡ ತರುವಂಥ ವಿಷಯಗಳು ಇದ್ದರೆ ಅದನ್ನು ತೆಗೆಯಲು ದಾರಿಗಳನ್ನು ಹುಡುಕಿ. ಇದನ್ನು ಮಾಡೋಕೆ ಆಗದೆ ಇದ್ರೆ, ಒತ್ತಡನಾ ಕಮ್ಮಿ ಮಾಡಲು ಪ್ರಯತ್ನಿಸಿ. ಉದಾಹರಣೆಗೆ ಒಂದು ಕೆಲಸನಾ ಇನ್ನೂ ಯಾವೆಲ್ಲಾ ರೀತೀಲಿ ಚೆನ್ನಾಗಿ ಮಾಡಬಹುದು ಅಂತ ಯೋಚಿಸಿ ಮತ್ತು ಯಾವ ಸಮಯದಲ್ಲಿ ಏನು ಮಾಡಬೇಕು ಅಂತ ಪಟ್ಟಿ ಮಾಡಿ.

  • ಎಲ್ಲರಿಗೂ ಒಂದೇ ರೀತಿಯ ಒತ್ತಡಗಳು ಬರಲ್ಲ. ಯಾಕಂದ್ರೆ ಎಲ್ಲರಿಗೂ ಬೇರೆ ಬೇರೆ ದೃಷ್ಟಿಕೋನ ಇರುತ್ತೆ. ಹಾಗಾಗಿ ವಿಷಯಗಳನ್ನು ಒಂದೇ ದೃಷ್ಟಿಕೋನದಲ್ಲಿ ನೋಡೋ ಬದಲು, ಬೇರೆ ಬೇರೆ ದೃಷ್ಟಿಕೋನದಿಂದ ನೋಡೋಕೆ ಪ್ರಯತ್ನಿಸಿ. ನಿಮಗೆ ಸಹಾಯ ಮಾಡೋ ಈ ಮೂರು ಸಲಹೆಗಳನ್ನು ನೋಡಿ:

    1. 1. ಎಲ್ಲರಿಗೂ ಕೆಟ್ಟ ಉದ್ದೇಶ ಇರುತ್ತೆ ಅಂತ ಅಂದುಕೊಳ್ಳಬೇಡಿ. ಉದಾಹರಣೆಗೆ, ನೀವು ಒಂದು ಲೈನ್‌ನಲ್ಲಿ ನಿಂತಾಗ ಒಬ್ಬ ವ್ಯಕ್ತಿ ಬಂದು ಮಧ್ಯದಲ್ಲಿ ಸೇರಿಕೊಂಡ ಅಂತ ಇಟ್ಟುಕೊಳ್ಳಿ. ನೀವಾಗ ಈ ವ್ಯಕ್ತಿ ಬೇರೆಯವರ ಬಗ್ಗೆ ಯೋಚಿಸೋದೇ ಇಲ್ಲ ಅಂತ ಅಂದುಕೊಂಡರೆ ನಿಮಗೆ ಕೋಪ ಬರುತ್ತೆ. ಅದರ ಬದಲು ಒಳ್ಳೇದನ್ನು ಯೋಚಿಸಿ. ಆ ವ್ಯಕ್ತಿಗೆ ಬೇರೆ ಏನಾದ್ರು ಅರ್ಜೆಂಟ್‌ ಕೆಲಸ ಬಂದಿರಬಹುದು ಅಲ್ವಾ?

    2. 2. ನಿಮಗೆ ಎದುರಾದ ಸನ್ನಿವೇಶದಿಂದ ಏನಾದ್ರು ಒಳ್ಳೇದು ಆಗುತ್ತಾ ಅಂತ ಯೋಚಿಸಿ. ಉದಾಹರಣೆಗೆ, ಆಸ್ಪತ್ರೆಯಲ್ಲಿ ಅಥವಾ ಏರ್‌ಪೋರ್ಟ್‌ನಲ್ಲಿ ತುಂಬ ಹೊತ್ತು ಕಾಯಬೇಕಾಗಿ ಬಂದ್ರೆ ನಿಮಗೆ ಕಷ್ಟ ಆಗಬಹುದು. ಆದರೆ ಆ ಸಮಯನಾ ಏನಾದ್ರು ಓದಕ್ಕೋ ಲ್ಯಾಪ್‌ಟಾಪ್‌ನಲ್ಲಿ ಏನಾದ್ರು ಕೆಲಸ ಮಾಡಕ್ಕೋ ಉಪಯೋಗಿಸಿದ್ರೆ ಟೈಮ್‌ ಹೋಗಿದ್ದೇ ಗೊತ್ತಾಗಲ್ಲ.

    3. 3. ಒಂದು ವಿಷಯದ ಬಗ್ಗೆ ಮುಂದಾಲೋಚನೆ ಇರಲಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ‘ಈ ವಿಷಯ ಮುಂದೆ ಹೋಗ್ತಾ ದೊಡ್ಡ ಸಮಸ್ಯೆ ಆಗುತ್ತಾ?’ ಯಾವುದು ಚಿಕ್ಕ ವಿಷಯ ಯಾವುದು ದೊಡ್ಡ ಸಮಸ್ಯೆ ಅಂತ ಗುರುತಿಸಿ.

ಎಲ್ಲದಕ್ಕೂ ಒಂದು ಕ್ರಮ ಇರಲಿ

“ಎಲ್ಲವುಗಳು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯಲಿ.”—1 ಕೊರಿಂಥ 14:40.

ಅರ್ಥ: ನಿಮ್ಮ ಜೀವನ ವ್ಯವಸ್ಥಿತವಾಗಿ ಇರಲಿ.

  • ನಮ್ಮೆಲ್ಲರಿಗೂ ಜೀವನದಲ್ಲಿ ಒಂದು ಕ್ರಮ ಇರಬೇಕು ಅಂತ ಇಷ್ಟ. ಆದ್ರೆ ಜೀವನದಲ್ಲಿ ಕ್ರಮ ಇಲ್ಲ ಅಂದ್ರೆ ನಮ್ಮ ಕೆಲಸಗಳನ್ನು ಮುಂದೂಡುತ್ತಾ ಹೋಗ್ತೀವಿ. ಹೀಗೆ ಮುಂದೂಡುತ್ತಾ ಹೋದ್ರೆ ಕೆಲಸಗಳು ಜಾಸ್ತಿ ಆಗುತ್ತಾ ಹೋಗುತ್ತೆ. ಇದು ಒತ್ತಡಕ್ಕೆ ನಡೆಸುತ್ತೆ. ನಿಮಗೆ ಸಹಾಯ ಮಾಡೋ ಈ ಎರಡು ಸಲಹೆಗಳನ್ನು ನೋಡಿ:

    1. 1. ಯಾವ ಸಮಯದಲ್ಲಿ ಏನು ಕೆಲಸ ಮಾಡಬೇಕು ಅಂತ ಬರೆದಿಡಿ. ಅದರ ಪ್ರಕಾರ ಮಾಡಲು ಪ್ರಯತ್ನಿಸಿ.

    2. 2. ಯಾವುದಾದರು ಕೆಲಸನಾ ಮುಂದೂಡಿದ್ದರೆ ಅದು ಯಾಕೆ ಅಂತ ಮೊದಲು ಗುರುತಿಸಿ, ಆಮೇಲೆ ತಿದ್ದುಕೊಳ್ಳಿ.

ಜೀವನದಲ್ಲಿ ಸಮತೂಕ ಇರಲಿ

“ಪ್ರಯಾಸದಿಂದಲೂ ಪ್ರಾಣಕ್ಕೆ ಆಯಾಸದಿಂದಲೂ ತುಂಬಿದ ಎರಡು ಕೈಗಳಿಂದಾದದ್ದಕ್ಕಿಂತ ನೆಮ್ಮದಿಯಿಂದ ಕೂಡಿದ ಒಂದು ಕೈಯಿಂದಾದದ್ದೇ ಲೇಸು.”—ಪ್ರಸಂಗಿ 4:6, ಪವಿತ್ರ ಗ್ರಂಥ.

ಅರ್ಥ: ಬರೀ ಕೆಲ್ಸ ಕೆಲ್ಸ ಅನ್ನೋರು ‘ಎರಡು ಕೈಗಳಿಂದ’ ಮಾಡಿದ ಕೆಲಸದಿಂದ ಸಿಕ್ಕಿದ ಪ್ರಯೋಜನವನ್ನು ಅನುಭವಿಸೋಕೂ ಆಗಲ್ಲ. ಯಾಕಂದ್ರೆ ಅವರು ಬರೀ ಕೆಲಸಗಳಲ್ಲೇ ಮುಳಿಗಿರೋದ್ರಿಂದ ಎಂಜಾಯ್‌ ಮಾಡುವಷ್ಟು ಟೈಮ್‌ ಮತ್ತು ಶಕ್ತಿನೂ ಅವರಿಗೆ ಇರಲ್ಲ.

  • ಕೆಲಸದ ಬಗ್ಗೆ ಹಣದ ಬಗ್ಗೆ ಸರಿಯಾದ ನೋಟ ಇಟ್ಟುಕೊಳ್ಳಿ. ತುಂಬ ಹಣ ಸಿಗುತ್ತೆ ಅಂದ ತಕ್ಷಣ ಸಂತೋಷ ಜಾಸ್ತಿ ಆಗುತ್ತೆ, ಒತ್ತಡ ಕಮ್ಮಿ ಆಗುತ್ತೆ ಅಂತ ಅರ್ಥ ಅಲ್ಲ. ನಿಜ ಹೇಳಬೇಕೆಂದ್ರೆ ಉಲ್ಟಾನೇ ಆಗುತ್ತೆ. ಪ್ರಸಂಗಿ 5:12 ರಲ್ಲಿ ಹೇಳೋ ಪ್ರಕಾರ “ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.” ಹಾಗಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚಿ.

  • ಬೇರೆ ವಿಷಯಗಳಿಗೂ ಸಮಯ ಮಾಡಿಕೊಳ್ಳಿ. ನಿಮಗೆ ಖುಷಿ ತರುವಂಥ ವಿಷಯಗಳನ್ನು ಮಾಡಿದ್ರೆ ಒತ್ತಡ ಕಮ್ಮಿ ಆಗುತ್ತೆ. ಹಾಗಂತ ಬರೀ ಟಿ.ವಿ ನೋಡ್ತಾ ಕೂತರೆ ಏನೂ ಪ್ರಯೋಜನ ಆಗಲ್ಲ. ದೈಹಿಕ ಚಟುವಟಿಕೆ ಸಹ ಇರಬೇಕು.

  • ಎಲೆಕ್ಟ್ರಾನಿಕ್‌ ಸಾಧನಗಳನ್ನು ಜಾಸ್ತಿ ಉಪಯೋಗಿಸಬೇಡಿ. ಯಾವಾಗಲೂ ಇಮೇಲ್‌, ಮೆಸೇಜ್‌, ಸೋಶಿಯಲ್‌ ಮೀಡಿಯಾಗಳನ್ನು ನೋಡುತ್ತಾ ಇರಬೇಡಿ. ಕೆಲಸಕ್ಕೆ ಸಂಬಂಧಿಸಿದ ಇಮೇಲ್‌ಗಳನ್ನು ಮನೇಲಿ ನೋಡಬೇಡಿ. ತುಂಬ ಅರ್ಜೆಂಟ್‌ ಕೆಲ್ಸ ಇದ್ದರೆ ಮಾತ್ರ ನೋಡಿ.

ಆರೋಗ್ಯನಾ ಚೆನ್ನಾಗಿ ನೋಡಿಕೊಳ್ಳಿ

“ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರವಾಗಿದೆ.”—1 ತಿಮೊಥೆಯ 4:8.

ಅರ್ಥ: ದಿನಾ ವ್ಯಾಯಾಮ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ.

  • ದೇಹಕ್ಕೆ ಪ್ರಯೋಜನ ತರುವ ರೂಢಿಗಳನ್ನು ಬೆಳೆಸಿಕೊಳ್ಳಿ. ಆಟ ಆಡುತ್ತಿದ್ದರೆ, ಜಾಗಿಂಗ್‌, ವಾಕಿಂಗ್‌ ಮಾಡುತ್ತಿದ್ದರೆ ನಮ್ಮ ಮೂಡ್‌ ಚೆನ್ನಾಗಿರುತ್ತೆ. ಒತ್ತಡ ಎದುರಿಸೋ ಶಕ್ತಿನೂ ದೇಹಕ್ಕೆ ಸಿಗುತ್ತೆ. ಹೊತ್ತಿಗೆ ಸರಿಯಾಗಿ ಊಟ, ತಿಂಡಿ ಮಾಡಿ. ಪೌಷ್ಠಿಕ ಆಹಾರ ತಿನ್ನಿ. ಸಾಕಷ್ಟು ವಿಶ್ರಾಂತಿ ತಗೊಳ್ಳಿ.

  • ಸಿಗರೇಟ್‌ ಸೇದೋದ್ರಿಂದ, ಡ್ರಗ್ಸ್‌ ತಗೊಳ್ಳೋದ್ರಿಂದ, ಕುಡಿಯೋದ್ರಿಂದ ಒತ್ತಡ ಕಮ್ಮಿ ಆಗುತ್ತೆ ಅಂತ ಅನ್ಕೋಬೇಡಿ. ಇದೆಲ್ಲಾ ನಿಮ್ಮ ದೇಹನಾ ಹಾಳು ಮಾಡುತ್ತೆ, ಹಣನೂ ವೇಸ್ಟ್‌ ಆಗುತ್ತೆ. ಇಂಥ ಚಟಗಳಿಂದ ನಿಮ್ಮ ಒತ್ತಡ ಜಾಸ್ತಿ ಆಗುತ್ತೆ ಹೊರತು ಕಮ್ಮಿ ಆಗಲ್ಲ.

  • ಒತ್ತಡ ವಿಪರೀತ ಆಗುತ್ತಿದೆ ಅಂತ ಅನಿಸಿದ್ರೆ ಡಾಕ್ಟರ್‌ ಹತ್ತಿರ ಹೋಗೋಕೆ ಹಿಂದೆ ಮುಂದೆ ನೋಡಬೇಡಿ. ಸಹಾಯ ಪಡೆಯೋದ್ರಲ್ಲಿ ತಪ್ಪೇನು ಇಲ್ಲ.

ಜೀವನದಲ್ಲಿ ಯಾವುದು ಮುಖ್ಯ ಅಂತ ಗುರುತಿಸಿ

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’—ಫಿಲಿಪ್ಪಿ 1:10.

ಅರ್ಥ: ಜೀವನದಲ್ಲಿ ಯಾವುದು ಮುಖ್ಯ ಯಾವುದು ಮುಖ್ಯ ಅಲ್ಲ ಅಂತ ಚೆನ್ನಾಗಿ ಯೋಚಿಸಿ ತಿಳಿದುಕೊಳ್ಳಿ.

  • ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ. ತುಂಬ ಮುಖ್ಯ ಇರೋ ಕೆಲಸಗಳನ್ನು ಮೊದಲು ಬರೆಯಿರಿ. ಆಗ ಮುಖ್ಯವಾದ ಕೆಲಸಗಳಿಗೆ ಹೆಚ್ಚು ಗಮನ ಕೊಡೋಕೆ ಆಗುತ್ತೆ. ಅಷ್ಟೇ ಅಲ್ಲ ಯಾವ ಕೆಲಸಗಳನ್ನು ಆಮೇಲೆ ಮಾಡಬಹುದು, ಯಾವ ಕೆಲಸಗಳನ್ನು ಬೇರೆಯವರಿಗೆ ಕೊಡಬಹುದು ಅಂತಾನೂ ಗೊತ್ತಾಗುತ್ತೆ.

  • ಒಂದು ವಾರದಲ್ಲಿ ನಿಮ್ಮ ಸಮಯನಾ ಹೇಗೆಲ್ಲಾ ಉಪಯೋಗಿಸುತ್ತೀರಾ ಅಂತ ಬರೆದಿಡಿ. ಆಮೇಲೆ ಆ ಸಮಯನಾ ಇನ್ನೂ ಚೆನ್ನಾಗಿ ಹೇಗೆ ಉಪಯೋಗಿಸಬಹುದು ಅಂತ ಯೋಚಿಸಿ. ಸಮಯನಾ ವಿವೇಚನೆಯಿಂದ ಉಪಯೋಗಿಸಿದಷ್ಟು ಒತ್ತಡ ಕಮ್ಮಿ ಆಗುತ್ತೆ.

  • ವಿಶ್ರಾಂತಿ ತಗೊಳ್ಳೋಕೆ ಅಂತಾನೇ ಒಂದು ಸಮಯ ಗೊತ್ತುಮಾಡಿ. ಆಗ ಉತ್ಸಾಹದಿಂದ ಕೆಲಸ ಮಾಡೋಕೆ ಆಗುತ್ತೆ, ನಿಮ್ಮ ಒತ್ತಡನೂ ಕಮ್ಮಿ ಆಗುತ್ತೆ.

ಬೇರೆಯವರ ಸಹಾಯ ಪಡಕೊಳ್ಳಿ

“ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.”—ಜ್ಞಾನೋಕ್ತಿ 12:25.

ಅರ್ಥ: ಬೇರೆಯವರು ನಿಮ್ಮ ಹತ್ತಿರ ಪ್ರೀತಿಯಿಂದ, ಕನಿಕರದಿಂದ ಮಾತಾಡಿದಾಗ ನಿಮ್ಮ ಮನಸ್ಸಿಗೆ ಹಾಯ್‌ ಅನಿಸುತ್ತೆ.

  • ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಭರವಸಾರ್ಹ ವ್ಯಕ್ತಿ ಹತ್ತಿರ ಮಾತಾಡಿ. ಅವರು ನಿಮಗೆ ಒಂದು ವಿಷಯನಾ ಬೇರೆ ದೃಷ್ಟಿಕೋನದಿಂದ ನೋಡೋಕೆ ಸಹಾಯ ಮಾಡಬಹುದು ಅಥವಾ ಆ ಸಮಸ್ಯೆನಾ ಬಗೆಹರಿಸೋದು ಹೇಗೆ ಅಂತಾನೂ ಹೇಳಿಕೊಡಬಹುದು. ಸಮಸ್ಯೆಗಳನ್ನು ಯಾರ ಹತ್ತಿರನಾದರೂ ಹಂಚಿಕೊಂಡ್ರೆ ಮನಸ್ಸು ಹಗುರ ಆಗುತ್ತೆ.

  • ಸಹಾಯ ಕೇಳಿ. ನಿಮ್ಮ ಕೆಲಸನಾ ಯಾರ ಜೊತೆನಾದ್ರು ಹಂಚಿಕೊಳ್ಳೋಕೆ ಆಗುತ್ತಾ? ಅಥವಾ ಆ ಕೆಲಸನಾ ಯಾರಿಗಾದ್ರು ಒಪ್ಪಿಸೋಕೆ ಆಗುತ್ತಾ?

  • ಜೊತೆ ಕೆಲಸ ಮಾಡುವವರಿಂದ ಒತ್ತಡ ಬರುತ್ತಿದ್ದರೆ ಅವರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ, ‘ನಿಮ್ಮಿಂದ ನಂಗೆ ಕಷ್ಟ ಆಗುತ್ತಿದೆ’ ಅಂತ ಪ್ರೀತಿ, ಜಾಣ್ಮೆಯಿಂದ ಅವರಿಗೆ ಹೇಳೋಕೆ ಆಗುತ್ತಾ? (ಜ್ಞಾನೋಕ್ತಿ 17:27) ಇದರಿಂದ ಪ್ರಯೋಜನ ಆಗಲಿಲ್ಲ ಅಂದ್ರೆ ಅವರೊಟ್ಟಿಗೆ ಕಳೀತಿರೋ ಸಮಯನಾ ಕಮ್ಮಿ ಮಾಡೋಕೆ ಆಗುತ್ತಾ?

ದೇವರ ಸಹಾಯ ಪಡಕೊಳ್ಳಿ

“ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3.

ಅರ್ಥ: ಮನುಷ್ಯರಾದ ನಮಗೆ ಆಹಾರ, ಬಟ್ಟೆ, ಮನೆ ಬೇಕೇ ಬೇಕು. ಆದರೆ ಇದರ ಜೊತೆ ದೇವರ ಮಾರ್ಗದರ್ಶನೆ ಸಹ ಬೇಕು. ಹಾಗಾಗಿ ನಾವು ಸಂತೋಷವಾಗಿರಬೇಕು ಅಂದ್ರೆ ದೇವರ ಸಹಾಯ ಪಡಕೊಳ್ಳಬೇಕು.

  • ಪ್ರಾರ್ಥನೆಯಿಂದ ತುಂಬ ಸಹಾಯ ಸಿಗುತ್ತೆ. “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಪ್ರಾರ್ಥನೆ ಮಾಡಿದ್ರೆ, ಒಳ್ಳೇ ವಿಷಯಗಳ ಬಗ್ಗೆ ಮನನ ಮಾಡಿದ್ರೆ ಮನಃಶಾಂತಿ ಸಿಗುತ್ತೆ.—ಫಿಲಿಪ್ಪಿ 4:6, 7.

  • ದೇವರ ಬಗ್ಗೆ, ಅವರು ಕೊಡೋ ಸಲಹೆಗಳ ಬಗ್ಗೆ ಓದಿ. ಈ ಪತ್ರಿಕೆಯಲ್ಲಿ ಕೊಟ್ಟಿರೋ ಸಲಹೆಗಳನ್ನು ಬೈಬಲಿನಿಂದ ಆರಿಸಲಾಗಿದೆ. ಈ ಸಲಹೆಗಳನ್ನು ಪಾಲಿಸಿದರೆ ನಮಗೆ ಬೇಕಾದ ‘ಸುಜ್ಞಾನ ಮತ್ತು ಬುದ್ಧಿ’ ಸಿಗುತ್ತೆ. (ಜ್ಞಾನೋಕ್ತಿ 3:21) ನೀವ್ಯಾಕೆ ಬೈಬಲ್‌ ಓದೋ ಗುರಿ ಇಡಬಾರದು? a ನೀವು ಬೇಕಾದ್ರೆ ಜ್ಞಾನೋಕ್ತಿ ಪುಸ್ತಕದಿಂದ ಓದಲು ಶುರು ಮಾಡಬಹದು.

a ಆನ್‌ಲೈನ್‌ನಲ್ಲಿ ಬೈಬಲನ್ನು www.dan124.com ನಲ್ಲಿ ಓದಬಹುದು.